ಭೂತಾರಾಧನೆ ಅಥವಾ ಕೋಲ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ `ಭೂತಾರಾಧನೆ’.
ತುಳುವರ ಭೂತ ಪದ ದೇವತಾ ವಾಚಿ ಪದ .ದುಷ್ಟ ಶಕ್ತಿಯನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು ಇವು.
ತುಳುವರ ಭೂತ ಪದ ದೇವತಾ ವಾಚಿ ಪದ .ದುಷ್ಟ ಶಕ್ತಿಯನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸತ್ಯದ ಶಕ್ತಿಗಳು ಇವು.
ಕೋಲ ಸಾಮಾನ್ಯವಾಗಿ ರಾತ್ರಿ ನಡೆಯುತ್ತದೆ. ಚಪ್ಪರ ಹಾಕಿ ಹೂ ತೋರಣಗಳಿಂದ ಕೋಲ ನಡೆಯುವ ಸ್ಥಳವನ್ನು ಸಿಂಗರಿಸಿರುತ್ತಾರೆ. ಎಲ್ಲರ ಆಗಮನದ ನಂತರ ಮನೆಯ ಯಜಮಾನ ತಲೆಗೆ ಮುಂಡಾಸು ಕಟ್ಟಿಕೊಂಡು ಸಮಸ್ತ ಹಿರಿಯರು ಹಾಗು ವಾದ್ಯ ವೃಂದದ ಜೊತೆಗೆ ಭೂತದ ಗುಡಿಗೆ ಹೋಗಿ ಭೂತಗಳಿಗೆ ಫೂಜೆ ಸಲ್ಲಿಸಿ ಭೂತದ ಭಂಡಾರ ಅಂದರೆ ಭೂತದ ಗಂಟೆ ಹಾಗು ಆಯುಧಗಳನ್ನು ಗುಡಿಯಿಂದ ತಂದು ಸಿಂಗರಿಸಿದ ಚಪ್ಪರದಲ್ಲಿ ಇಡುತ್ತಾರೆ.
ನಂತರ ಇತ್ತ ನೆರೆದವರೆಲ್ಲ ಭೋಜನಕ್ಕೆ ಹೊರಟರೆ ಅತ್ತ ಕೋಲ ಕಟ್ಟುವವರು ವೇಷ ಹಾಕುವುದರಲ್ಲಿ ನಿರತರಾಗುತ್ತಾರೆ. ಭೋಜನ ನಂತರ ಎಲ್ಲರೂ ಕೋಲ ನಡೆಯುವ ಜಾಗದ ಸುತ್ತಮುತ್ತ ಕುರ್ಚಿಯಲ್ಲಿ ಅಥವಾ ಚಾಫೆಯಲ್ಲಿ ಆಸೀನರಾಗುತ್ತಾರೆ. ತದನಂತರ ಕೋಲ ಕಟ್ಟುವವರು ವೇಷ ಭೂಷಣ ಮುಗಿಸಿ ಗಗ್ಗರ(ಕಾಲಿಗೆ ಕಟ್ಟುವ ಗೆಜ್ಜೆ) ಹಾಗು ಸಿರಿ (ಎಳೆ ತೆಂಗಿನ ಗರಿ) ಸಮೇತವಾಗಿ ಪ್ರಧಾನ ವೇದಿಕೆ ಮೇಲೆ ಕೋಲ ಕಟ್ಟಲು ಅಣಿಯಾಗಿ ಬರುತ್ತಾರೆ. ಯಜಮಾನನ ಹಾಗೂ ನೆರೆದವರ ಅಪ್ಪಣೆ ಪಡೆದು, ವಾದ್ಯ-ಡೋಲು ಸಿಡಿಮದ್ದುಗಳ ಘರ್ಜನೆಯೊಂದಿಗೆ ಕಾಲಿಗೆ ಗಗ್ಗರ ಮತ್ತು ಸೊಂಟಕ್ಕೆ ಸಿರಿ ಕಟ್ಟಿಕೊಳ್ಳುತ್ತಾರೆ. ಕೋಲ ವಿದ್ಯುಕ್ತವಾಗಿ ಆರಂಭವಾಗುತ್ತದೆ.
ವಾದ್ಯ ಮೇಳದ ಹಾಡಿಗೆ ಭೂತಗಳು ಹೆಜ್ಜೆ ಹಾಕಲು ಶುರುಮಾಡುತ್ತವೆ. ಇದು ಕೋಲದ ಪ್ರಧಾನ ಆಕರ್ಷಣೆ. ಬೆಂಕಿಯ ದೀವಟಿಗೆ ಹಿಡಿದು ಕುಣಿಯುವ ದೃಶ್ಯವಂತು ನಯನ ಮನೋಹರ.ಸುಮಾರು ಎರಡು ಮೂರು ಸುತ್ತಿನ ಕುಣಿತದ ನಂತರ ಕೋಲ ಮಹತ್ವದ ಘಟ್ಟಕ್ಕೆ ತಲುಪುತ್ತದೆ. ಭೂತಗಳು ತಾವು ನಡೆದು ಬಂದ ದಾರಿಯನ್ನು ಪಾರ್ದನದ (ಹಾಡು) ಹೇಳಲು ಶುರುಮಾಡುತ್ತವೆ. ಇದು ಸುಮಾರು ಒಂದು ಗಂಟೆ ಕಾಲ ನಡೆಯುತ್ತದೆ. ಮುಂದೆ ಆದೇಶದಂತೆ ಆತ ನೀಡುವ ಭೊಂಡ (ಎಳೆ ನೀರು) ಮತ್ತು ಕುಂಕುಮ ಪ್ರಸಾದವನ್ನು ಅಷ್ಟ ದಿಕ್ಪಾಲಕರಿಗೆ ಸಮರ್ಪಿಸಿ, ಕುಲದೇವರಿಗೆ ವಂದಿಸಿ, ಕೈಯಲ್ಲಿ ಖಡ್ಗ, ಗಂಟೆ ಹಿಡಿದು, ಯಜಮಾನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗುತ್ತಾರೆ.
ಯಜಮಾನ ತನ್ನ ತೊಂದರೆಗಳನ್ನು, ಬಗೆಹರಿಯದ ಸಮಸ್ಯೆಗಳನ್ನು ಭೂತದ ಮುಂದೆ ನೀವೇದಿಸಿಕೊಳ್ಳುತ್ತಾನೆ. ಭೂತ ಮುಂದಿನ ದಿನಗಳಲ್ಲಿ ಅದನ್ನು ಬಗೆಹರಿಸುವ ಭರವಸೆ ನೀಡುತ್ತದೆ.ಇದು ಸುಮಾರು ಬೆಳಗಿನ ಜಾವದ ವರೆಗೆ ನಡೆಯುತ್ತದೆ. ಎಲ್ಲರಿಗೆ ಭೂತದಿಂದ ಸಮಂಜಸ ಉತ್ತರ ದೊರಕಿದ ನಂತರ ಕೋಲ ಮುಕ್ತಾಯದ ಹಂತಕ್ಕೆ ಬರುತ್ತದೆ. ಮತ್ತೊಮ್ಮೆ ಸಿಡಿಮದ್ದು ವಾದ್ಯಗಳ ಘರ್ಜನೆಯೊಂದಿಗೆ ಎಲ್ಲರ ಅಪ್ಪಣೆ ಪಡೆದು ಕಟ್ಟಿದ ಗಗ್ಗರ ಬಿಚ್ಚುವುದರೊಂದಿಗೆ ಕೋಲ ಮುಕ್ತಾಯವಾಗುತ್ತದೆ.